ಈ ವಿಶ್ವದ ನಿರ್ಮಾಣವಾಗಿ ಸರಿ ಸುಮಾರು 5 ಬಿಲಿಯನ್ ವರ್ಷಗಳ ಒಂದು ಅಂದಾಜು ಲೆಕ್ಕಾಚಾರವಾಗಿದ್ದರೂ ಭೂಮಿಯ ಮೇಲೆ ಜೀವಿಗಳ ಉಗಮವಾಗಿ ಕೆಲವೇ ಮಿಲಿಯನ್ ವರ್ಷಗಳಾಗಿವೆ. ಭೂಮಿಯ ಮೇಲಿನ ವಾತಾವರಣ ಬದಲಾಗುತ್ತ ಬಂದಂತೆ ಜೀವಿಗಳ ದೇಹಗಳಲ್ಲಿ ಬದಲಾವಣೆಗಳಾಗುತ್ತಾ ಬಂದವು. ಈ ವಿಕಾಸಗಳಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗುವ ಮನುಷ್ಯನ ವಿಕಾಸವೂ ಒಂದು. ಬೆಂಕಿಯುಂಡೆಯಾಗಿದ್ದ ಗೋಳವೊಂದು ತಂಪಾಗಿ ಹಸಿರು ಪೃಥ್ವಿಯಾಗಿತ್ತು. ಈಗ ಮತ್ತೆ ಬೆಂಕಿಯುಂಡೆಯಾಗುವತ್ತ ಸಾಗುವಂತೆ ಮಾಡಿದ್ದು ನಾವೇ ಅಲ್ಲವೇ?
ಸ್ಟೀಫನ್ ಹಾಕಿಂಗ್ಸ್ ಹೇಳುವಂತೆ ಮಾನವರು ಇನ್ನು 100 ವರ್ಷಗಳಲ್ಲಿ ಬೇರೊಂದು ಗ್ರಹವನ್ನು ಮನೆ ಮಾಡಿಕೊಳ್ಳದೆ ಇದ್ದರೆ ಮನುಷ್ಯ ಕುಲದ ವಿನಾಶ ಖಂಡಿತ. ಆದರೆ ಮಾನವೀಯತೆ ಎಂಬುದು ಪುಸ್ತಕಗಳಲ್ಲಿ ಮಾತ್ರ ಕಾಣಸಿಗುವ ಭಾವನೆಯಾಗಿದೆ. ನಾವು ಬೇರೊಂದು ಮನೆಯನ್ನು ಈ ವಿಶ್ವದಲ್ಲಿ ಹುಡುಕಬೇಕಾಗಿರುವುದು ಹೋಮೋಸೆಫಿಯಾನ್ಸ್ ಎಂಬ ಜೀವಿಯ ಅಳಿಯುವಿಕೆಯನ್ನು ತಪ್ಪಿಸಲು ಮಾತ್ರ.
ನಮ್ಮ ಗ್ರಹ-ಗೃಹ ಪೃಥ್ವಿಯನ್ನು ತೊರೆದು ಬೇರೊಂದು ಮನೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿಯನ್ನು ತಂದು ಕೊಂಡಿದ್ದೇವೆ. ಬೇರೊಂದು ಜೀವಿಗಳಿರುವ ಗ್ರಹ ಇನ್ನೂ ಕೂಡ ಪತ್ತೆಯಾಗಿಲ್ಲ. ಎಣಿಸಲಾರದಷ್ಟು ನಕ್ಷತ್ರಗಳು, ಅಕಾಶಕಾಯಗಳಿದ್ದರೂ ಭೂಮಿಯೊಂದರಲ್ಲೇ ಜೀವವೈವಿಧ್ಯಕ್ಕೆ ಸಾಕ್ಷಿಯಾಗುವುದಕ್ಕೆ ಕಾರಣವಾದ ಅಂಶವಾದರೂ ಏನು? ನಮ್ಮ ಸೌರವ್ಯೂಹದ ಸುತ್ತಮುತ್ತಲೂ ಹಲವಾರು ಜ್ಯೋತಿರ್ವರ್ಷಗಳ ದೂರದವರೆಗೂ ಯಾವುದೇ ಜೀವಿಯ ಕುರುಹುಗಳು ಕಂಡು ಬಂದಿಲ್ಲ. ಅಲ್ಲದೇ ಮಾನವನ ಜೀವಿತಾವಧಿಯು ವಿಶ್ವದ ಸಮಯಕ್ಕೆ ಹೋಲಿಸಿದರೆ ಗಣನೆಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಹೀಗಿರುವಾಗ ಹೊಸದೊಂದು ವಾಸಯೋಗ್ಯ ಗ್ರಹದ ಹುಡುಕಾಟ ಸಾಧ್ಯವೇ? ವಿಶ್ವ ಪರ್ಯಟನೆಗೆ ಹೊರಟರೆ ಅಲ್ಲಿಯೇ ಸಂತನಯೋತ್ಪತ್ತಿಯ ಪ್ರಕ್ರಿಯೆಯನ್ನು ನಡೆಸುತ್ತಾ ಮುಂದುವರೆಯಬೇಕಾದೀತು. ಅದು ಒಂದು ಮಾರ್ಗವೆಂದು ತೋರಿದರೂ ಉಸಿರಾಟಕ್ಕೆ ನೂರಾರು ವರ್ಷಗಳಿಗೆ ಸಾಕಾಗುವಷ್ಟು ಆಮ್ಲಜನಕವನ್ನು ಕೊಂಡೊಯ್ಯುವುದು ಸಾಧ್ಯವೇ? ಹಾಗಾದರೆ ಪರ್ಯಾಯ ಮಾರ್ಗಗಳು!? ವರ್ಮ್ ಹೋಲ್ ಗಳ ನಿರ್ಮಾಣ? ಅಥವಾ ಸುಪ್ತ ಸ್ಥಿತಿಯಲ್ಲಿ ಅಂತರಿಕ್ಷಯಾತ್ರಿಗಳನ್ನು ಸಾಗಿಸುವುದು? ಎಲ್ಲದಕ್ಕೂ ಉತ್ತರವನ್ನು ಕಾಲವೇ ನೀಡುತ್ತದೆ...
2045, ಅಕ್ಟೋಬರ್ 12: ಒಂದು ಸಣ್ಣ ಕೊಠಡಿ. ಒಳಗೆ ಒಂದು ದುಂಡನೆಯ ಮೇಜು. ಅದರ ಸುತ್ತಲೂ 3 ಜನ ಮಧ್ಯವಯಸ್ಸಿನ ವ್ಯಕ್ತಿಗಳು ಕೂತಿದ್ದಾರೆ. ಎಲ್ಲರ ಮುಖದಲ್ಲೂ ಗಂಭೀರ ಭಾವ ಎದ್ದು ಕಾಣುತ್ತಿದೆ. ಹವಾ ನಿಯಂತ್ರಿತ ಕೊಠಡಿಯಾಗಿದ್ದರೂ ಪರಿಸ್ಥಿತಿಯ ಗಾಂಭೀರ್ಯತೆ ಅಲ್ಲಿನ ವಾತಾವರಣವನ್ನು ಬಿಸಿಯಾಗಿಸಿತ್ತು. ಅವರಲ್ಲಿ ಗಲ್ಲಕ್ಕೆ ಕೈಕೊಟ್ಟು ಕೂತಿರುವವ ಡೇವಿಡ್ ಆಂಟೋನಿ, ಖಾಸಗಿ ಅಂತರಿಕ್ಷ ಕೇಂದ್ರವೊಂದರ ಮುಖ್ಯಸ್ಥ. ಅವನೆದುರಲ್ಲಿ ಸ್ಮಾರ್ಟ್-ಸ್ಪೆಕ್ಟ್ ಧರಿಸಿ ಲೆಕ್ಕಾಚಾರ ಹಾಕುತ್ತಿರುವ ವಿನಯ್ ಚತುರ್ವೇದಿ, ಭಾರತೀಯ ಖಾಸಗಿ ಅಂತರಿಕ್ಷ ಸಂಸ್ಥೆ ಹಾಗೂ nullBrainsನ ಉಪವಿಭಾಗದ ಅಧ್ಯಕ್ಷ. ಮೂರನೆಯ ಗಡ್ಡದಾರಿ ವ್ಯಕ್ತಿ ತುಟಿಗಳ ಮಧ್ಯೆ ಸಿಗಾರ್ ಸಿಕ್ಕಿಸಿಕೊಂಡು ತನ್ನ ಸಾವಿನ ಸಮಯವನ್ನು ಇನ್ನಷ್ಟು ಕಡಿಮೆಗೊಳಿಸುತ್ತಾ ಇದ್ದಾನೆ. ಅವನು ಬೇರಾರೂ ಅಲ್ಲ ; ರಾಮಚಂದ್ರ ಹೆಗಡೆ, nullBrains ಮಹಾ ಸಂಸ್ಥೆಯ ಸಂಸ್ಥಾಪಕ. ನಾಲ್ಕನೆಯ ಕುರ್ಚಿಯೊಂದು ಖಾಲಿಯಿದೆ. ಆ ವ್ಯಕ್ತಿಯ ಅಗಮನಕ್ಕಾಗಿಯೇ ಎಲ್ಲರೂ ಕಾಯುತ್ತಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ ಬಾಗಿಲನ್ನು ನಿಧಾನವಾಗಿ ತೆರೆದು ಒಳಕ್ಕೆ ಧಾವಿಸಿದ ಇಪ್ಪತ್ತರ ಆಸುಪಾಸಿನ ನಾಲ್ಕನೆಯ ವ್ಯಕ್ತಿ; ಮನೋಜ್ ಹೆಗಡೆ. ತನ್ನ ತಂದೆಯ ಮುಖವನ್ನೊಮ್ಮೆ ನೋಡಿ ತನಗಾಗಿ ಮಿಸಲಿಟ್ಟಿದ್ದ ಕುರ್ಚಿಯಲ್ಲಿ ಕೂರಹೋದ. ರಾಮಚಂದ್ರ ಹೆಗಡೆ ಒಮ್ಮೆಲೇ ಸಿಗಾರನ್ನು ಬಾಯಿಂದ ತೆಗೆದು, "ವೆಲ್ಕಮ್ ಸನ್ ವೆಲ್ಕಮ್. ಮೀಟಿಂಗ್ ಟೈಂ ಎಷ್ಟೊತ್ತಿಗೆ ಇದ್ದಿದ್ದು. ನೀನು ಬಂದಿರುವುದು ಎಷ್ಟೊತ್ತಿಗೆ?" ಎಂದು ಗದರಿದಾಗ ಬೆಚ್ಚಿಬಿದ್ದು ನಿಂತನು. ತನ್ನ ಬೈಗುಳವನ್ನು ಮುಂದುವರೆಸಹೊರಟ ರಾಮಚಂದ್ರಗೆ ವಿನಯ್ ಚತುರ್ವೇದಿ, "ಲೆಟ್ಸ್ ಸ್ಟಾರ್ಟ್ ದಿ ಡಿಸ್ಕಶನ್ ಗಯ್ಸ್" ಎಂದನು. ಒಮ್ಮೆ ತನ್ನ ಮಗನತ್ತ ಕೋಪದಿಂದ ಧಿಟ್ಟಿಸಿದ ರಾಮಚಂದ್ರ, "ಓಕೆ. ಕನೆಕ್ಟ್ ಟು ದಿ ವರ್ಲ್ಡ್." ಎಂದು ವಿನಯ್ ಗೆ ಆದೇಶಿಸಿದರು. ಕೆಲವೇ ಕ್ಷಣಗಳಲ್ಲಿ ಅವರೆದುರು ಇದ್ದ ಪರದೆಯ ಮೇಲೆ 12 ದೇಶಗಳ ಮುಖ್ಯಸ್ಥರ ಮುಖಗಳು ಮೂಡಿದವು. (ಮುಂದುವರೆಯುವುದು)